Thursday, July 30, 2015

ಹಿಂದೂ ಮನೆಯ ಸಂಕೇತಗಳು - ವೈಜಜ್ಞಾನಿಕ ನೋಟ

              ಇಲ್ಲಿ ನಾವು ಪ್ರತಿಯೊಂದು ಚಿಕ್ಕ-ಚಿಕ್ಕ ಆಚಾರಗಳ ಕುರಿತಾಗಿಯೂ ಕೂಡ ವೈಜ್ಞಾನಿಕವಾಗಿ ಒಂದು ಸಣ್ಣ ಪಕ್ಷಿನೋಟ ನೋಡುವುದರಲ್ಲಿ ತಪ್ಪು ಇಲ್ಲ ಎಂದು ಕಾಣುತ್ತದೆ. ನಾವು ಪಾಲಿಸುತ್ತಿರುವ ಆಚಾರಗಳ ಕುರಿತು ನಮಗೆ ಸ್ಪಷ್ಟತೆ ಇರುವುದರಲ್ಲಿ ಪಾರ್ಣ ಅರ್ಥವಿದೆ. ಹಾಗಾಗಿ ನಾವು ತುಳಸೀ ಸ್ಥಾಪನೆಯ ಕುರಿತು ಸ್ವಲ್ಪವಾಗಿ ಅರಿತಿದ್ದೇವೆ. ಈಗ ಇತರೆ ವಿಚಾರಗಳ ಕುರಿತು ತಿಳಿಯೋಣ.

ವೇದಮಂತ್ರ ಮತ್ತು ಶಂಖಧ್ವಾನ :

              ಸದಾ ಕೃಷ್ಣನ ಕೈಯಲ್ಲಿ ವಿರಾಜಮಾನವಾಗಿರುವ ಶಂಖನೋಡಲು ಬಹಳ ನಯನ ಮನೋಹರ. ನಮ್ಮ ಮನುಕುಲದ ಪರಂಪರೆಯಲ್ಲಿ ಶಂಖಕ್ಕೆ ಬಹಳ ಮಹತ್ವದ ಪಾತ್ರವಿದೆ. ಪ್ರತಿಯೊಂದು ಶುಭಕಾರ್ಯದಲ್ಲಿ, ಯುಧ್ಧದಲ್ಲಿ, ಸಂಭ್ರಮಾಚರಣೆಗಳಲ್ಲಿ ನಾವು ಶಂಖದ ನಾದವನ್ನು ಮಾಡುತ್ತೇವೆ.
              ಕೆಲವರು ಯೋಚಿಸಬಹುದು; ಈ ಸಂಪ್ರದಾಯಗಳೆಲ್ಲ ಏಕೆ? ಬರೀ ತೋರಿಕೆಗಾಗಿಯೇ? ಅಥವಾ ಇವೆಲ್ಲವೂ ಬೂಟಾಟಿಕೆಗಾಗಿಯೇ? ಇವೆಲ್ಲವೂ ಅರ್ಥವಿಲ್ಲದ ಅನರ್ಥಕಾರ್ಯಗಳೇ? ಖಂಡಿತವಾಗಿಯು ಅಲ್ಲ. ಇದರ ಹಿಂದೆ ಉತ್ತಮ ವಿಚಾರ ಧಾರೆ ಹಾಗೂ ವೈಜ್ಞಾನಿಕತೆ ಅಡಗಿದೆ.
              ನಾವು ಶಂಖ ಊದಿದಾಗ ಅದರ ನಾದ ತರಂಗಗಳು ಹೊರಹೊಮ್ಮಿ ಎಲ್ಲೆಡೆಯು ಹರಡಿ ವಾತಾವರಣ ಮತ್ತು ಮನಸ್ಸನ್ನು ತಿಳಿಗೊಳಿಸುತ್ತದೆ. ಈ ತರಂಗಗಳು ಬಹಳ ವೈಜ್ಞಾನಿಕವಾದ ಅನುಪಾತದಲ್ಲಿ (Scientific and Sequential Manner) ಸೃಷ್ಟಿಯಾಗುತ್ತವೆ. ಈ ತರಂಗಗಳು (Waves) ಮನಸನ್ನು ಪ್ರಶಾಂತವಾಗಿರಿಸಲು ಸಹಾಯವಾಗುತ್ತವೆ. ಈ ಶಂಖವನ್ನು ದೇವಸ್ಥಾನಗಳಲ್ಲಿ ತಪ್ಪದೆ ಊದುತ್ತಾರೆ. ಕಾರಣ ಚಂಚಲವಾದ ಮನಸ್ಸು ಯಾವಕಡೆಯು ಚದರಿಹೋಗದೆ ಒಂದರೆಕ್ಷಣವಾದರೂ ದೇವರೆಡೆಗೆ ಮುಖಮಾಡುತ್ತದೆ. ಶಂಖವನ್ನು ಕಿವಿಗೆ ಹತ್ತಿರವಾಗಿರಿಸಿದಾಗ ಅದರಿಂದ ಹೊರಡುವ ತರಂಗಗಳು ಮಾನವನ ಶರೀರದಲ್ಲಿ ಕಂಪನಾಂಕವನ್ನು ಉಂಟುಮಾಡುತ್ತದೆ. ಇದರಿಂದ ಮಾನವನ ಶರೀರವಿಡೀ ಉತ್ತೇಜನಕ್ಕೊಳಗಾಗಿ ಉಲ್ಲಾಸವನ್ನುಂಟುಮಾಡುತ್ತದೆ. ಇದು ವೈಜ್ಞಾನಿಕತೆಯಲ್ಲವೆ?
               ಅಷ್ಟೇ ಅಲ್ಲದೆ ತುಳಸೀ ತೀರ್ಥವನ್ನು ಸೇವಿಸಿದಂತೆ ಶಂಖದ ತೀರ್ಥವನ್ನು ನೀರಿನಲ್ಲಿ ಬೆರೆಸಿ ಕೊಡುತ್ತಾರೆ. ಕಾರಣವೇನೆಂದು ತರ್ಕದ ದೃಷ್ಟಿಯಿಂದ ನೋಡಿದರೆ ಇದರಲ್ಲಿ ಅಡಗಿರುವ ವೈಜ್ಞಾನಿಕತೆ ಕಂಡುಬರುತ್ತದೆ.

Wednesday, July 29, 2015

ಹಿಂದೂ ಮನೆಯ ಸಂಕೇತಗಳು - ವೈಜಜ್ಞಾನಿಕ ನೋಟ

              ಹಿಂದೂ ಮನೆ ಎಂದೊಡನೆ ಹತ್ತು ಹಲವು ಸಂಕೇತಗಳು, ಚಿತ್ರಣಗಳು ಕಣ್ಣ ಮುಂದೆ ಹಾದು ಹೋಗುವವು. ಪ್ರತಿಯೊಂದು ಅರ್ಥಪೂರ್ಣ ಸದಾಚಾರಗಳೇ ತುಂಬಿ ತುಳುಕುತ್ತಿವೆ. ಯಾವುದೋ ಗೊಡ್ಡು ಸಂಪ್ರದಾಯ ಅಥವಾ ಪೊಳ್ಳು ತುಂಬಿದ ಆಚರಣೆಗಳಲ್ಲ. ನಮ್ಮ ಋಷಿ ಮುನಿಗಳ ಪರಂಪರೆಯಲ್ಲಿ ವೈಜ್ಷಾನಿಕವಲ್ಲದ ಅಥವಾ ಕುರುಡು ಪಧ್ಧತಿಗಳು ಇರಲಿಲ್ಲ. ಆದರೆ ಕೆಲವು ಸಾಮಾಜಿಕವಾದಿಗಳು ಯಾವುದೋ ಒಂದು ಮಾತಿನ ತಂತು ಹಿಡಿದು ಕೆಲವು ಆಚಾರಗಳನ್ನು ಹುಟ್ಟು ಹಾಕಿದ್ದಾರೆ. ಉದಾಹರಣೆಗೆ ಸತಿ ಸಹಗಮನ ಸತಿಗೆ ಇಷ್ಟವಿಲ್ಲದಿದ್ದರೂ ಆಚರಿಸುವುದು, ಚಿಕ್ಕ ವಯಸ್ಸಿನಲ್ಲಿ ವಿವಾಹ, ಸ್ತ್ರೀಯರು ವೇದಗಳನ್ನು ಅಭ್ಯಸಿಸಬಾರದು ಹೀಗೆ ಹಲವು ಕಟ್ಟು-ಬಾಟು ನಿಯಮಗಳನ್ನು ಹುಟ್ಟು ಹಾಕಿದರು. ಆದರೆ ಇವಾವು ಋಷಿ-ಮುನಿಗಳ ಪರಂಪರಾಗತವಲ್ಲ.
           ಹಾಗಾಗಿ ನಮ್ಮ ಋಷಿಗಳ ಆಚಾರಗಳಲ್ಲಿ ವೈಜ್ಞಾನಿಕತೆ ಪೂರ್ಣತ್ವಗಳು ಕಂಡುಬರುತ್ತವೆ. ಹಿಂದೂಗಳು ಲೌಕಿಕವನ್ನು ಇಚ್ಛಿಸದ ಕಾರಣದಿಂದ ಸಂಪ್ರದಾಯಗಳಿಗೆ, ಸಂಸ್ಕಾರಗಳಿಗೆ, ಆಚಾರ-ವಿಚಾರಗಳಿಗೆ ಪೌರಾಣಿಕ ಕತೆಗಳನ್ನು ಹೆಣೆಯುತ್ತಾ ವೈಜ್ಞಾನಿಕತೆಯನ್ನು ಹೆಚ್ಚು ಪರಿಚಯಿಸಲು ಹೋಗಲಿಲ್ಲ. ಅಥವಾ ನಮ್ಮ ಹಿಂದೂಗಳೇ ಹೆಚ್ಚು ತಿಳಿಯಲೂ ಇಚ್ಛಿಸಿಲ್ಲವೆಂದು ಕಾಣುತ್ತದೆ. ಹೋಗಲಿಬಿಡಿ ಇನ್ನು ಮುಂದೆಯಾದರೂ ನಾವು ನಮ್ಮ ಮನೆಯಲ್ಲಿ ಆಚರಿಸುವ ಆಚರಣೆಗಳ ಕುರಿತು ಮತ್ತು ಇದರ ಹಿನ್ನೆಲೆಯಲ್ಲಿ ಹಿಂದೂ ಮನೆಯ ಸಂಕೇತಗಳನ್ನು ವೈಜ್ಞಾನಿಕವಾಗಿ ತಿಳಿಯೋಣ.

ತುಳಸೀ ಸ್ಥಾಪನೆ :

                         ನಗೃಹಂ ಗೃಹಮಿತ್ಯಾಹುಃ ತುಳಸೀ ಗೃಹಮುಚ್ಯತೆ
                         ಸದನಂ ತು ತುಳಸೀ ಹೀನಂ ಸ್ಮಶಾನಾದತಿರಿಚ್ಯತಿ
ಮೇಲಿನ ಶ್ಲೋಕದಿಂದ ಒಂದು ವಿಷಯವಂತು ಸ್ಪಷ್ಟವಾಗುವುದು. ನಮ್ಮ ಪೂರ್ವಜರು ತುಳಸೀ ಗಿಡಕ್ಕೆ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿದ್ದಾರೆ. ತುಳಸಿಯನ್ನು ತಪ್ಪದೆ ನೆಡಬೇಕೆಂಬ ದೃಷ್ಟಿಯಿಂದ ಹಿಂದೂಗಳಲ್ಲಿ ಪಾಪಭೀತಿಯನ್ನು ಸೃಷ್ಟಿಸಿದರು. ತುಳಸಿಯೆಂದರೆ ದೇವತಾಸ್ವರೂಪ ಹಾಗಾಗಿ ಅದಕ್ಕೆ ನಿತ್ಯ ಪ್ರದಕ್ಷಿಣೆ ಮಾಡಬೇಕೆಂಬ ನಿಯಮವನ್ನು ಮುಂದಿಟ್ಟರು. ತುಳಸೀ ಪ್ರದಕ್ಷಿಣೆಗೆ ವೈಜ್ಞಾನಿಕ ಕಾರಣವಿದೆ. ಆದರೆ ಇದನ್ನು ತಿಳಿಯದೆ ಈ ಆಚಾರವನ್ನು ಮೂಢನಂಬಿಕೆಗಳ ಪರಮಾವಧಿಯೆಂದು ಯೋಚಿಸುತ್ತಾರೆ. 
            ತುಳಸಿಯು ಎಲ್ಲಾಗುಣಗಳನ್ನು ಹೊಂದಿರುವ ಒಂದು ಔಷಧೀಯ ಮೂಲಿಕೆ. ಬೆಳಗಿನಜಾವದ ಸೂರ್ಯನ ಆ ಎಳೆ ಕಿರಣಗಳು ರಂಗುರಂಗಾಗಿ ಮೂಡಣದಿಂದ ಬೀಸುವ ತಂಪಾದ ಹವೆಯೊಂದಿಗೆ ಸೇರಿಕೊಂಡು ತುಳಸಿಯ ದಳಗಳ ಮೇಲೆ ಬಿದ್ದಾಗ ಅವುಗಳಲ್ಲಿ ಉಂಟಾಗುವ ಪರಿಣಾಮ ಅಧ್ಭುತ!!!!. ರಾತ್ರಿವೇಳೆಯಲ್ಲಿ ತುಳಸಿಸಸ್ಯದಲ್ಲಿ ರಾಸಾಯನಿಕ ಪ್ರಕ್ರಿಯೆ ನೆಡೆದು ಬೆಳಗಿನ ಜಾವದಲ್ಲಿ ಸೂರ್ಯನಕಿರಣಗಳು ಬಿದ್ದ ಕ್ಷಣ ಅದು ಎಲ್ಲೆಡೆಯೂ ಪಸರಿಸುತ್ತದೆ. ಹಾಗಾಗಿ ಪ್ರಾತಃಕಾಲೀನ ಸೂರ್ಯನ ಕಿರಣಗಳು ಪ್ರಥಮವಾಗಿ ತುಳಸಿಯ ಮೇಲೆ ಬೀಳಲಿ ಎಂಬ ಉದ್ದೇಶದಿಂದ ಪೂರ್ವದಿಕ್ಕಿನಲ್ಲಿ ತುಳಸೀ ಕಟ್ಟೆಯನ್ನು ಕಟ್ಟಿಸಬೇಕು ಎಂದು ನಮ್ಮ ಋಷಿ(ವಿಜ್ಞಾನಿ)ಗಳು ಹೇಳಿದ್ದಾರೆ. ನಾವುಕೂಡ ತುಳಸೀಗೆ ಪೂರ್ವಾಭಿಮುಖವಾಗಿ ನಿಂತು ನಮಸ್ಕರಿಸುವಾಗ ಆ ಸಸ್ಯದಲ್ಲಿರುವ ಸತ್ವವು ಗಾಳಿಯಲ್ಲಿ ಬೆರೆತು ನಮ್ಮ ಶ್ವಾಸಕೋಶದ ಮೂಲಕವಾಗಿ ದೇಹದ ಒಳಗೆ ಹೋಗಿ ನಮ್ಮ ಶರೀರವನ್ನು ಶುದ್ದೀಕರಿಸುತ್ತದೆ.
           ಈ ವೈಜ್ಞಾನಿಕ ಕಾರಣವನ್ನು ಮುಂದಿಟ್ಟುಕೊಂಡು ನಮ್ಮ ಪೂರ್ವಜರು ಬೆಳಗಿನ ಜಾವದಲ್ಲಿ ತುಳಸೀ ಕಟ್ಟೆಗೆ ಪ್ರದಕ್ಷಿಣೆಗಳನ್ನು ಹಾಕಬೇಕು ಎಂದರು. ಇದರಿಂದ ಕೇವಲ ಭೌತಿಕ ಶರೀರಕ್ಕೆ ಮಾತ್ರವಲ್ಲದೆ ಮಾನಸಿಕ ಶಾಂತಿಯು ಸಿಗುತ್ತದೆ. ಹಾಗಾಗಿ ಈ ನಮ್ಮ ಆಚಾರವು ಶಾರೀರಿಕ ಮತ್ತು ಮಾನಸಿಕ ವಿಜ್ಞಾನವನ್ನು ಒಳಗೊಂಡಿದೆ.